ಅರುವರಿಗೆ ಕಾಸರಗೋಡಿನಲ್ಲಿ ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಸೆಪ್ಟೆ೦ಬರ್ 10 , 2015
|
ಆಗಸ್ಟ್ 30, 2015
|
ಅರುವರಿಗೆ ಕಾಸರಗೋಡಿನಲ್ಲಿ ಸಮ್ಮಾನ
ಕಾಸರಗೋಡು :
ಒಂದೇ ಪಾತ್ರ ದಲ್ಲಿ 50 ವರ್ಷಗಳ ಕಾಲ ಒಬ್ಟಾತ ಬೇಡಿಕೆ ಉಳಿಸಿಕೊಳ್ಳುವುದೆಂದರೆ ಅದು ಭಾರತೀಯ ರಂಗಭೂಮಿಯಲ್ಲೇ ಸಾಧನೆಯ ಚರಿತ್ರೆ. 50 ವರ್ಷಗಳಿಂದ ದುಶ್ಯಾಸನ ಸಹಿತ ಖಳ ಪಾತ್ರಗಳಿಗೆ ನಿತ್ಯ ನಾವೀನ್ಯದಿಂದ ಮೆರುಗು ನೀಡಿ, ದುಷ್ಟ ಪಾತ್ರಗಳನ್ನು ನಾಯಕ ಪಾತ್ರಗಳಿಗಿಂತ ಎತ್ತರಕ್ಕೇರಿಸಿದ ಅರುವ ಕೊರಗಪ್ಪ ಶೆಟ್ಟರು ನಿಜ ಜೀವನದಲ್ಲಿ ಅಪ್ಪಟ ಮಾನವತಾವಾದಿ. ಸಹಜೀವಿಯೆಡೆಗಿನ ಕರುಣೆ, ಸಹಾಯಹಸ್ತ, ದಾನ ಇತ್ಯಾದಿಗಳಿಂದ ಯಕ್ಷಗಾನ ಕಲಾವಿದರ ಸಾಲಲ್ಲೇ ಅವರು ಭಿನ್ನ ಮತ್ತು ಮಾದರಿ.
62 ವರ್ಷಗಳ ತಿರುಗಾಟದ 75ರ ಹರೆಯದ ಅರುವ ಅವರು ರಂಗಸ್ಥಳದಲ್ಲಿ ಈಗಲೂ ಚುರುಕಿನ ಬೆಂಕಿ ಚೆಂಡು, ಜೀವನದಲ್ಲಿ ನಿರೋಗಿ. ಇದಕ್ಕೆ ಕಾರಣ ಅವರ ಜೀವನ ಕ್ರಮ. ಇದು ಕಲಾವಿದರಿಗೆ ಮಾದರಿ ಎಂದು "ಕಣಿಪುರ' ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಅವರು ತಿಳಿಸಿದರು.
ನಗರದ ಲಲಿತಕಲಾ ಸದನದಲ್ಲಿ ಪುಂಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಆಯೋಜನೆಗೊಂಡ ಯಕ್ಷಗಾನ ಪ್ರದ ರ್ಶನದ ರಂಗಸ್ಥಳದಲ್ಲಿ ದುಶ್ಯಾಸನನ ಪಾತ್ರದಲ್ಲಿ 50 ವರ್ಷಗಳನ್ನು ಪೂರೈಸಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ನೀಡಿದ ಸಮ್ಮಾನದಲ್ಲಿ ಅವರು ಅಭಿನಂದನ ಭಾಷಣ ಮಾಡಿದರು.
ಸಮ್ಮಾನಕ್ಕೆ ಪ್ರತಿಕ್ರಿಯಿಸಿದ ಅರುವ ಅವರು, ಎಲ್ಲ ಊರಿನಲ್ಲೂ ಸಮ್ಮಾನ ಸಂದ ನನಗೆ ಕಾಸರಗೋಡಿನಲ್ಲಿ ಸಮ್ಮಾನ ಸಂದಿರಲಿಲ್ಲ. ಇದೀಗ ಆ ಕೊರತೆ ನೀಗಿದೆ. ಕೊನೆಯುಸಿರಿನ ತನಕ ರಂಗಸ್ಥಳದಲ್ಲಿರಬೇಕು, ಪಾತ್ರಕ್ಕೆ ನ್ಯಾಯ ಸಲ್ಲಿಸಬೇಕು ಎಂಬುದೇ ನನ್ನ ಆಸೆ. ನಾನೆಂದಿಗೂ ವೇಷದಲ್ಲಿ ಉದಾಸೀನ ಮಾಡಿದವನಲ್ಲ, ಕಲೆಯಿಂದ ಸಿಕ್ಕಿದನ್ನು ಕಲೆಗೆ ಸಮರ್ಪಿಸಿದ ತೃಪ್ತಿ ಇದೆ ಎಂದರು.
ಪ್ರಸಿದ್ಧ ಚಿತ್ರಕಲಾವಿದ ಪಿ.ಎಸ್. ಪುಣಿಂಚತ್ತಾಯ ಅಧ್ಯಕ್ಷತೆ ವಹಿಸಿದ್ದರು. ಡಾ| ಹರಿಕಿರಣ್ ಬಂಗೇರ ಯಕ್ಷಗಾನ ಪ್ರದರ್ಶನ ಮತ್ತು ಸಮಾರಂಭ ಉದ್ಘಾಟಿಸಿ ದರು. ಉಡುಪುಮೂಲೆ ಗೋಪಾಲಕೃಷ್ಣ ಭಟ್, ರಾಘವೇಂದ್ರ ಉಡುಪುಮೂಲೆ ಉಪಸ್ಥಿತರಿದ್ದರು. ಅಂಕಣಕಾರ, ಕಲಾವಿದ ನಾ.ಕಾರಂತ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು. ಮುಕುಂದ ಮಲ್ಲ ಸ್ವಾಗತಿಸಿ, ಸಮ್ಮಾನ ಪತ್ರ ವಾಚಿಸಿದರು. ಬಳಿಕ ಪ್ರಸಿದ್ಧ ಕಲಾವಿದರಿಂದ "ಅಕ್ಷಯಾಂಬರ - ಮಾಯಾತಿಲೋತ್ತಮೆ - ರಕ್ತರಾತ್ರಿ' ಯಕ್ಷಗಾನ ಪ್ರದರ್ಶನಗೊಂಡಿತು.
ಕೃಪೆ :
udayavani.com
|
|
|